ಶ್ರೀ ಲಕ್ಷ್ಮೀ ಹೃದಯ Sri Lakshmi Hrudaya Stotra Kannada Lyrics

ಶ್ರೀ ಲಕ್ಷ್ಮೀ ಹೃದಯ Sri Lakshmi Hrudaya Sthothram Kannada language lyrics by hindu devotional blog. Lakshmi Hrudaya Stotram is a wonderful mantra of Mahalakshmi starting with lyrics Sri manohare lakumi tavapada tamarasayuga Bajipe nityadi - Sri Guru Jagannatha Dasaru

ಶ್ರೀ ಲಕ್ಷ್ಮೀ ಹೃದಯ

ಶ್ರೀ ಮನೋಹರೆ ಲಕುಮಿ ತವಪದ ತಾಮರಸಯುಗ ಭಜಿಪೆ ನಿತ್ಯದಿ

ಸೋಮಸೋದರಿ ಪರಮಮಂಗಳೆ ತಪ್ತಕಾಂಚನಳೇ |

ಸೋಮಸೂರ್ಯಸುತೇಜೋರೂಪಳೆ ಹೇಮಸನ್ನಿಭ ಪೀತವಸನಳೆ

ಚಾಮೀಕರಮಯ ಸರ್ವಭೂಷಣ ಜಾಲಮಂಡಿತಳೇ, ಭೂಷಣ ಜಾಲಮಂಡಿತಳೇ ||೧||


ಬೀಜಪೂರಿತ ಹೇಮಕಲಶವ ರಾಜಮಾನ ಸುಹೇಮ ಜಲಜವ

ನೈಜ ಕರದಲಿ ಪಿಡಿದುಕೊಂಡು ಭಕುತಜನತತಿಗೇ |

ಮಾಜದಲೆ ಸಕಲೇಷ್ಟ ನೀಡುವ ರಾಜಮುಖಿ ಮಹದಾದಿವಂದ್ಯಳೆ

ಮೂಜಗತ್ತಿಗೆ ಮಾತೆ ಹರಿವಾಮಾಂಕದೊಳಗಿರ್ಪ, ಹರಿವಾಮಾಂಕದೊಳಗಿರ್ಪೆ||೨||


ಶ್ರೀ ಮಹತ್ತರ ಭಾಗ್ಯಮಾನಿಯೇ ಸ್ತೌಮಿ ಲಕುಮಿ ಅನಾದಿ ಸರ್ವ ಸುಕಾಮ

ಫಲಗಳನೀವ ಸಾಧನ ಸುಖವಕೊಡುತಿರ್ಪ |

ಕಾಮಜನನಿಯೆ ಸ್ಮರಿಪೆ ನಿತ್ಯದಿ ಪ್ರೇಮಪೂರ್ವಕ ಪ್ರೇರಿಸೆನ್ನನು

ಹೇ ಮಹೇಶ್ವರಿ ನಿನ್ನ ವಚನವ ಧರಿಸಿ ಭಜಿಸುವೆನು, ಧರಿಸಿ ಭಜಿಸುವೆನು||೩


ಸರ್ವ ಸಂಪದವೀವ ಲಕುಮಿಯೆ ಸರ್ವ ಭಾಗ್ಯವನೀವ ದೇವಿಯೆ

ಸರ್ವಮಂಗಳವೀವ ಸುರವರ ಸಾರ್ವಭೌಮಿಯಳೇ |

ಸರ್ವ ಜ್ಞಾನವನೀವ ಜ್ಞಾನಿಯೆ ಸರ್ವ ಸುಖಫಲದಾಯಿ ಧಾತ್ರಿಯೆ

ಸರ್ವಕಾಲದಿ ಭಜಿಸಿ ಬೇಡಿದೆ ಸರ್ವ ಪುರುಷಾರ್ಥ, ಬೇಡಿದೆ ಸರ್ವ ಪುರುಷಾರ್ಥ || ೪ ||

www.hindudevotionalblog.com

ನತಿಪೆ ವಿಜ್ಞಾನಾದಿ ಸಂಪದ ಮತಿಯ ನಿರ್ಮಲ ಚಿತ್ರ ವಾಕ್ಪದ

ತತಿಯ ನೀಡುವದೆನಗೆ ಸರ್ವದ ಸರ್ವ ಗುಣಪೂರ್ಣೇ |

ನತಿಪ ಜನರಿಗನಂತಸೌಖ್ಯವ ಅತಿಶಯದಿ ನೀನಿತ್ತ ವಾರ್ತೆಯು

ವಿತತವಾಗಿಹದೆಂದು ಬೇಡಿದೆ ಭಕ್ತವತ್ಸಲಳೇ, ಬೇಡಿದೆ ಭಕ್ತವತ್ಸಲಳೇ ||೫||


ಸರ್ವ ಜೀವರ ಹೃದಯ ವಾಸಿನಿ ಸರ್ವ ಸಾರ ಸುಭೋಕ್ತ್ರೆ ಸರ್ವದಾ

ಸರ್ವ ವಿಶ್ವದಲಂತರಾತ್ಮಕೆ ವ್ಯಾಪ್ತೆ ನಿರ್ಲಿಪ್ತೆ |

ಸರ್ವ ವಸ್ತು ಸಮೂಹದೊಳಗೆ ಸರ್ವ ಕಾಲದಿ ನಿನ್ನ ಸಹಿತದಿ

ಸರ್ವ ಗುಣ ಸಂಪೂರ್ಣ ಶ್ರೀ ಹರಿ ತಾನೆ ಇರುತಿರ್ಪ, ಶ್ರೀ ಹರಿ ತಾನೆ ಇರುತಿರ್ಪ||೬||


ತರಿಯೆ ನೀ ದಾರಿದ್ರ್ಯ ಶೋಕವ ಪರಿಯೆ ನೀನಜ್ಞಾನ ತಿಮಿರವ

ಇರಿಸು ತ್ವತ್ಪದ ಪದ್ಮಮನ್ಮನೋ ಸರಸಿ ಮಧ್ಯದಲಿ |

ಚರರ ಮನಸಿನ ದುಃಖ ಭಂಜನ ಪರಮ ಕಾರಣವೆನಿಪ ನಿನ್ನಯ

ಕರುಣಪೂರ್ಣ ಕಟಾಕ್ಷದಿಂದಭಿಷೇಕ ನೀ ಮಾಡೇ, ಅಭಿಷೇಕ ನೀ ಮಾಡೇ || ೭ ||


ಅಂಬಾ ಎನಗೆ ಪ್ರಸನ್ನಳಾಗಿ ತುಂಬಿ ಸೂಸುವ ಪರಮ ಕರುಣಾ –

ವೆಂಬ ಪೀಯುಷ ಕಣದಿ ತುಂಬಿದ ದೃಷ್ಟಿ ತುದಿಯಿಂದ |

ಅಂಬುಜಾಕ್ಷಿಯೆ ನೋಡಿ ಎನ್ನ ಮನೆ ತುಂಬಿಸೀಗಲೆ ಧಾನ್ಯ ಧನಗಳ

ಹಂಬಲಿಸುವೆನು ಪಾದಪಂಕಜ ನಮಿಪೆನನವರತ, ನಮಿಪೆನನವರತ || ೮ ||


ಶಾಂತಿನಾಮಕೆ ಶರಣ ಪಾಲಕೆ ಕಾಂತಿನಾಮಕೆ ಗುಣಗಣಾಶ್ರಯೇ

ಶಾಂತಿನಾಮಕೆ ದುರಿತನಾಶಿನಿ ಧಾತ್ರಿ ನಮಿಸುವೆನು |

ಭ್ರಾಂತಿನಾಶನಿ ಭವದ ಶಮದಿಂಶ್ರಾಂತನಾದೆನು ಭವದಿ ಎನಗೆ ನಿತಾಂತ

ಧನ ನಿಧಿ ಧಾನ್ಯ ಕೋಶವನಿತ್ತು ಸಲಹುವುದು, ಇತ್ತು ಸಲಹುವುದು || ೯ ||


ಜಯತು ಲಕ್ಷ್ಮೀ ಲಕ್ಷಣಾಂಗಿಯೆ ಜಯತು ಪದ್ಮಾ ಪದ್ಮವಂದ್ಯಳೆ

ಜಯತು ವಿದ್ಯಾ ನಾಮೆ ನಮೋ ನಮೋ ವಿಷ್ಣುವಾಮಾಂಕೇ |

ಜಯಪ್ರದಾಯಕೆ ಜಗದಿವಂದ್ಯಳೆ ಜಯತು ಜಯ ಚೆನ್ನಾಗಿ ಸಂಪದ

ಜಯವೆ ಪಾಲಿಸು ಎನಗೆ ಸರ್ವದಾ ನಮಿಪೆನನವರತ, ನಮಿಪೆನನವರತ||೧೦||

www.hindudevotionalblog.com

ಜಯತು ದೇವೀ ದೇವ ಪೂಜ್ಯಳೆ ಜಯತು ಭಾರ್ಗವಿ ಭದ್ರ ರೂಪಳೆ

ಜಯತು ನಿರ್ಮಲ ಜ್ಞಾನವೇದ್ಯಳೆ ಜಯತು ಜಯ ದೇವೀ |

ಜಯತು ಸತ್ಯಾಭೂತಿ ಸಂಸ್ಥಿತೆ ಜಯತು ರಮ್ಯಾ ರಮಣ ಸಂಸ್ಥಿತೆ

ಜಯತು ಸರ್ವ ಸುರತ್ನ ನಿಧಿಯೊಳಗಿರ್ಪೆ ನಿತ್ಯದಲಿ, ನಿಧಿಯೊಳಗಿರ್ಪೆ ನಿತ್ಯದಲಿ||೧೧||


ಜಯತು ಶುದ್ಧಾ ಕನಕ ಭಾಸಳೆ ಜಯತು ಕಾಂತಾ ಕಾಂತಿ ಗಾತ್ರಳೆ

ಜಯತು ಜಯ ಶುಭ ಕಾಂತೆ ಶೀಘ್ರದೆ ಸೌಮ್ಯ ಗುಣ ರಮ್ಯೇ |

ಜಯತು ಜಯಗಳದಾಯಿ ಸರ್ವದಾ ಜಯವೆ ಪಾಲಿಸು ಸರ್ವ ಕಾಲದಿ

ಜಯತು ಜಯ ಜಯ ದೇವಿ ನಿನ್ನನು ವಿಜಯ ಬೇಡಿದೆನು, ವಿಜಯ ಬೇಡಿದೆನು||೧೨||


ಆವ ನಿನ್ನಯ ಕೆಳೆಗಳಿಂದಲಿ ಆ ವಿರಿಂಚಿಯು ರುದ್ರ ಸುರಪತಿ

ದೇವ ವರಮುಖ ಜೀವರೆಲ್ಲರೂ ಸರ್ವಕಾಲದಲಿ |

ಜೀವಧಾರಣೆ ಮಾಡೋರಲ್ಲದೆ ಆವ ಶಕ್ತಿಯೂ ಕಾಣೆನವರಿಗೆ

ದೇವಿ ನೀ ಪ್ರಭು ನಿನ್ನ ಶಕ್ತಿಲಿ ಶಕ್ತರೆನಿಸುವರು, ಶಕ್ತರೆನಿಸುವರು || ೧೩ ||


ಆಯು ಮೊದಲಾಗಿರ್ಪ ಪರಮಾದಾಯ ಸೃಷ್ಟಿಸು ಪಾಲನಾದಿ ಸ್ವಕೀಯ

ಕರ್ಮವ ಮಾಡಿಸುವಿ ನಿನಗಾರುಸರಿಯುಂಟೇ |

ತೋಯಜಾಲಯೆ ಲೋಕನಾಥಳೆ ತಾಯೆ ಎನ್ನನು ಪೊರೆಯೇ ಎಂದು

ಬಾಯಿ ಬಿಡುವೆನು ಸೋಕನೀಯನ ಜಾಯೆ ಮಾಂ ಪಾಹೀ, ಜಾಯೆ ಮಾಂ ಪಾಹೀ ||೧೪||


ಬೊಮ್ಮ ಎನ್ನಯ ಫಣೆಯ ಫಲಕದಿ ಹಮ್ಮಿನಿಂದಲಿ ಬರೆದ ಲಿಪಿಯನು

ಅಮ್ಮ ಅದನನು ತೊಡೆದು ನೀ ಬ್ಯರಿಬ್ಯಾರೆ ವಿಧದಿಂದ |

ರಮ್ಯವಾಗಿಹ ನಿನ್ನ ಕರುಣಾ ಹರ್ಮ್ಯದೊಳಗಿರುತಿರ್ಪ ಭಾಗ್ಯವ

ಘಮ್ಮನೆ ದೊರೆವಂತೆ ಈ ಪರಿ ನಿರ್ಮಿಸೋತ್ತಮಳೇ, ನಿರ್ಮಿಸೋತ್ತಮಳೇ ||೧೫||


ಕನಕ ಮುದ್ರಿಕೆ ಪೂರ್ಣ ಕಲಶವ ಎನಗೆ ಅರ್ಪಿಸು ಜನುಮ ಜನುಮದಿ

ಜನನಿ ಭಾಗ್ಯದಭಿಮಾನಿ ನಿನಗಭಿನಮಿಸಿ ಬಿನ್ನೈಪೆ |

ಕನಸಿಲಾದರು ಭಾಗ್ಯ ಹೀನನು ಎನಿಸಬಾರದು ಎನ್ನ ಲೋಕದಿ

ಎನಿಸು ಭಾಗ್ಯದ ನಿಧಿಯು ಪರಿ ಪರಿ ಉಣಿಸು ಸುಖಫಲವ, ಒಣಿಸು ಸುಖಫಲವ|| ೧೬||


ದೇವಿ ನಿನ್ನಯ ಕಳೆಗಳಿಂದಲಿ ಜೀವಿಸುವುದೀ ಜಗವು ನಿತ್ಯದಿ

ಭಾವಿಸೀಪರಿ ಎನಗೆ ಸಂತತ ನಿಖಿಲ ಸಂಪದವ |

ದೇವಿ ರಮ್ಯ ಮುಖಾರವಿಂದಳೆ ನೀ ಒಲಿದು ಸೌಭಾಗ್ಯ ಪಾಲಿಸು

ಸೇವಕಾಧಮನೆಂದು ಬ್ಯಾಗನೆ ಒಲಿಯೇ ನೀ ಎನಗೆ, ಅಮ್ಮಾ, ಒಲಿಯೇ ನೀ ಎನಗೆ ||೧೭||


ಹರಿಯ ಹೃದಯದಿ ನೀನೆ ನಿತ್ಯದಿ ಇರುವ ತೆರದಲಿ ನಿನ್ನ ಕಳೆಗಳು

ಇರಲಿ ಎನ್ನಯ ಹೃದಯ ಸದನದಿ ಸರ್ವಕಾಲದಲಿ |

ನಿರುತ ನಿನ್ನಯ ಭಾಗ್ಯ ಕಳೆಗಳು ಬೆರೆತು ಸುಖಗಳ ಸಲಿಸಿ ಸಲಹಲಿ

ಸಿರಿಯೆ ಶ್ರೀಹರಿ ರಾಣಿ ಸರಸಿಜ ನಯನೆ ಕಲ್ಯಾಣಿ, ಸರಸಿಜ ನಯನೆ ಕಲ್ಯಾಣಿ ||೧೮||


ಸರ್ವ ಸೌಖ್ಯ ಪ್ರದಾಯಿ ದೇವಿಯೆ ಸರ್ವ ಭಕ್ತರಿಗಭಯ ದಾಯಿಯೆ

ಸರ್ವ ಕಾಲದಲಚಲ ಕಳೆಗಳ ನೀಡು ಎನ್ನಲ್ಲಿ |

ಸರ್ವ ಜಗದೊಳು ಘನ್ನ ನಿನ್ನಯ ಸರ್ವ ಸುಕಳಾ ಪೂರ್ಣನೆನಿಸಿ

ಸರ್ವ ವಿಭವದಿ ಮೆರೆಸು ಸಂತತ ವಿಘ್ನವಿಲ್ಲದಲೇ , ವಿಘ್ನವಿಲ್ಲದಲೇ ||೧೯||

www.hindudevotionalblog.com

ಮುದದಿ ಎನ್ನಯ ಫಾಲದಲಿ ಸಿರಿ ಪದುಮೆ ನಿನ್ನಯ ಪರಮ ಕಳೆಯೂ

ಒದಗಿ ಸರ್ವದಾ ಇರಲಿ ಶ್ರೀ ವೈಕುಂಠ ಗತ ಲಕ್ಷ್ಮೀ |

ಉದಯವಾಗಲಿ ನೇತ್ರಯುಗಳದಿ ಸದಯ ಮೂರ್ತಿಯೆ ಸತ್ಯಲೋಕದ

ಚದುರೆ ಲಕುಮಿಯೆ ಕಳೆಯು ವಾಕ್ಯದಿ ನಿಲಿಸಲನವರತ, ನಿಲಿಸಲನವರತ|| ೨೦||


ಶ್ವೇತ ದಿವಿಯೊಳಗಿರುವ ಲಕುಮಿಯೆ ನೀತವಾಗಿಹ ಕಳೆಯು ನಿತ್ಯದಿ

ಮಾತೆ ಎನ್ನಯ ಕರದಿ ಸಂತತ ವಾಸವಾಗಿರಲಿ |

ಪಾಥೋ ನಿಧಿಯೊಳಗಿರ್ಪ ಲಕುಮಿಯೆ ಜಾತಕಳೆಯು ಮಮಾಂಗದಲಿ ಸಂಪ್ರೀತಿ

ಪೂರ್ವಕವಿರಲಿ ಸರ್ವದಾ ಪಾಹೀ ಮಾಂ ಪಾಹೀ, ಪಾಹೀ ಮಾಂ ಪಾಹೀ ||೨೧||


ಇಂದು ಸೂರ್ಯರು ಎಲ್ಲಿ ತನಕ ಕುಂದದಲೆ ತಾವಿರುವರೋ ಸಿರಿ

ಇಂದಿರೇಶನು ಯಾವ ಕಾಲದ ತನಕ ಇರುತಿರ್ಪ |

ಇಂದಿರಾತ್ಮಕ ಕಳೆಯ ರೂಪಗಳಂದಿನದ ಪರಿ ಅಂತರಿರ್ಪವು

ಕುಂದು ಇಲ್ಲದೆ ಎನ್ನ ಬಳಿಯಲಿ ತಾವೆ ನೆಲಸಿರಲಿ, ತಾವೆ ನೆಲಸಿರಲಿ||೨೨||


ಸರ್ವಮಂಗಳೆ ಸುಗುಣ ಪೂರ್ಣಳೆ ಸರ್ವ ಐಶ್ವರ್ಯಾದಿಮಂಡಿತೆ

ಸರ್ವ ದೇವಗಣಾಭಿವಂದ್ಯಳೆ ಆದಿಮಹಾಲಕ್ಷ್ಮೀ |

ಸರ್ವಕಳೆ ಸಂಪೂರ್ಣೆ ನಿನ್ನಯ ಸರ್ವಕಳೆಗಳು ಎನ್ನ ಹೃದಯದಿ

ಸರ್ವಕಾಲದಲಿರಲಿ ಎಂದು ನಿನ್ನ ಪ್ರಾರ್ಥಿಸುವೆ, ನಿನ್ನ ಪ್ರಾರ್ಥಿಸುವೆ ||೨೩||


ಜನನೀ ಎನ್ನ ಅಜ್ಞಾನ ತಿಮಿರವ ದಿನದಿನದಿ ಸಂಹರಿಸಿ ನಿನ್ನವನೆನಿಸಿ

ಧ್ಯಾನವ ಮಾಳ್ಪ ನಿರ್ಮಲ ಜ್ಞಾನ ಸಂಪದವಾ |

ಕನಕ ಮಣಿ ಧನ ಧಾನ್ಯ ಭಾಗ್ಯವ ಇನಿತು ನೀ ಎನಗಿತ್ತು ಪಾಲಿಸು

ಮಿನುಗುತಿಹ ಘನವಾದ ನಿನ್ನಯ ಕಳೆಯು ಶೋಭಿಸಲಿ, ನಿನ್ನಯ ಕಳೆಯು ಶೋಭಿಸಲಿ ||೨೪||


ನಿರುತ ತಮತತಿ ಹರಿಪ ಸೂರ್ಯನ ತೆರದಿ ಕ್ಷಿಪ್ರದಿ ಹರಿಸಲಕ್ಷ್ಮಿಯ

ಸರಕು ಮಾಡದೆ ತರಿದು ಓಡಿಸು ದುರಿತ ರಾಶಿಗಳಾ |

ಪರಿಪರಿಯ ಸೌಭಾಗ್ಯ ನಿಧಿಯನು ಹರುಷದಿಂದಲಿ ನೀಡಿ ಎನ್ನನು

ಥರಥರದಿ ಕೃತ ಕೃತ್ಯನಿಳೆಯೊಳಗೆನಿಸು ದಯದಿಂದ, ಎನಿಸು ದಯದಿಂದ|| ೨೫||


ಅತುಳ ಮಹದೈಶ್ವರ್ಯ ಮಂಗಳತತಿಯು ನಿನ್ನಯ ಕಳೆಗಳೊಳಗೆ

ವಿತತವಾಗಿ ವಿರಾಜಮಾನದಲಿರ್ಪ ಕಾರಣದೀ |

ಶ್ರುತಿಯು ನಿನ್ನಯ ಮಹಿಮೆ ತಿಳಿಯದು ಸ್ತುತಿಸಬಲ್ಲೆನೇ ತಾಯೇ ಪೇಳ್ವುದು

ಮತಿವಿಹೀನನು ನಿನ್ನ ಕರುಣಕೆ ಪಾತ್ರನೆನಿಸಮ್ಮ, ಕರುಣಕೆ ಪಾತ್ರನೆನಿಸಮ್ಮ ||೨೬||


ನಿನ್ನ ಮಹಾದಾವೇಶ ಭಾಗ್ಯಕೆ ಎನ್ನ ಅರ್ಹನ ಮಾಡು ಲಕುಮಿಯೆ

ಘನ್ನತರ ಸೌಭಾಗ್ಯ ನಿಧಿ ಸಂಪನ್ನನೆನಿಸೆನ್ನ |

ರನ್ನೆ ನಿನ್ನಯ ಪಾದಕಮಲವ ಮನ್ನದಲಿ ಸಂಸ್ತುತಿಸಿ ಬೇಡುವೆ

ನಿನ್ನ ಪರತರ ಕರುಣ ಕವಚವ ತೊಡಿಸಿ ಪೊರೆಯಮ್ಮ, ಕವಚವ ತೊಡಿಸಿ ಪೊರೆಯಮ್ಮ ||೨೭||


ಪೂತ ನರನನು ಮಾಡಿ ಕಳೆಗಳ ವ್ರಾತದಿಂದಲಿ ಎನ್ನ ನಿಷ್ಠವ

ಘಾತಿಸೀಗಲೆ ಎನಗೆ ಒಲಿದು ಬಂದು ಸುಳಿ ಮುಂದೆ |

ಮಾತೆ ಭಾರ್ಗವಿ ಕರುಣಿ ನಿನ್ನಯ ನಾಥನಿಂದೊಡಗೂಡಿ ಸಂತತ

ಪ್ರೀತಳಾಗಿರು ಎನ್ನ ಮನೆಯೊಳು ನಿಲ್ಲು ನೀ ಬಿಡದೇ, ಮನೆಯೊಳು ನಿಲ್ಲು ನೀ ಬಿಡದೇ ||೨೮||


ಪರಮಸಿರಿ ವೈಕುಂಠ ಲಕುಮಿಯೆ ಹರಿಯ ಸಹಿತದಲೆನ್ನ ಮುಂದಕೆ

ಹರುಷ ಪಡುತಲಿ ಬಂದು ಶೋಭಿಸು ಕಾಲ ಕಳೆಯದಲೇ |

ವರದೆ ನಾ ಬಾರೆಂದು ನಿನ್ನನು ಕರೆದೆ ಮನವನು ಮುಟ್ಟಿ ಭಕುತಿಯ

ಭರದಿ ಬಾಗಿದ ಶಿರದಿ ನಮಿಸುವೆ ಕೃಪೆಯ ಮಾಡೆಂದು, ಕೃಪೆಯ ಮಾಡೆಂದು||೨೯||


ಸತ್ಯಲೋಕದ ಲಕುಮಿ ನಿನ್ನಯ ಸತ್ಯ ಸನ್ನಿಧಿ ಎನ್ನ ಮನೆಯಲಿ

ನಿತ್ಯ ನಿತ್ಯದಿ ಪೆರ್ಚಿ ಹಬ್ಬಲಿ ಜಗದಿ ಜನತತಿಗೇ |

ಅತ್ಯಧಿಕ ಆಶ್ಚರ್ಯ ತೋರಿಸಿ ಮರ್ತ್ಯರೋತ್ತಮನೆನಿಸಿ ನೀ ಕೃತ

ಕೃತ್ಯನೀಪರಿ ಮಾಡಿ ಸಿರಿ ಹರಿಗೂಡಿ ನಲಿದಾಡೇ, ಹರಿಗೂಡಿ ನಲಿದಾಡೇ ||೩೦||


ಕ್ಷೀರವಾರಿಧಿ ಲಕುಮಿಯೇ ಪತಿನಾರಸಿಂಹನ ಕೂಡಿ ಬರುವುದು

ದೂರ ನೋಡದೆ ಸಾರೆಗೆರೆದು ಪ್ರಸಾದ ಕೊಡು ಎನಗೆ |

ವಾರಿಜಾಕ್ಷಿಯೆ ನಿನ್ನ ಕರುಣಾಸಾರ ಪೂರ್ಣ ಕಟಾಕ್ಷದಿಂದಲಿ

ಬಾರಿ ಬಾರಿಗೆ ನೋಡಿ ಪಾಲಿಸು ಪರಮ ಪಾವನ್ನೇ, ಪರಮ ಪಾವನ್ನೇ ||೩೧||


ಶ್ವೇತ ದ್ವೀಪದ ಲಕುಮಿ ತ್ರಿಜಗನ್ಮಾತೆ ನೀ ಎನ್ನ ಮುಂದೆ ಶೀಘ್ರದಿ

ನಾಥನಿಂದೊಡಗೂಡಿ ಬಾರೆ ಪ್ರಸನ್ನ ಮುಖ ಕಮಲೇ |

ಜಾತರೂಪ ಸುತೇಜರೂಪಳೆ ಮಾತರಿಶ್ವ ಮುಖಾರ್ಚಿತಾಂಘ್ರಿಯೆ

ಜಾತರೂಪೋದರಾಂಡ ಸಂಘಕೆ ಮಾತೆ ಪ್ರಖ್ಯಾತೆ, ಮಾತೆ ಪ್ರಖ್ಯಾತೆ ||೩೨||


ರತ್ನಗರ್ಭನ ಪುತ್ರಿ ಲಕುಮಿಯೆ ರತ್ನಪೂರಿತ ಭಾಂಡ ನಿಚಯವ

ಯತ್ನಪೂರ್ವಕ ತಂದು ಎನ್ನಯ ಮುಂದೆ ನೀ ನಿಲ್ಲು |

ರತ್ನಖಚಿತ ಸುವರ್ಣಮಾಲೆಯ ರತ್ನಪದಕದ ಹಾರ ಸಮುದಯ

ಜತ್ನದಿಂದಲಿ ನೀಡಿ ಸರ್ವದಾ ಪಾಹೀ ಪರಮಾಪ್ತೆ, ಪಾಹೀ ಪರಮಾಪ್ತೆ ||೩೩||


ಎನ್ನ ಮನೆಯಲಿ ಸ್ಥೈರ್ಯದಿಂದಲಿ ಇನ್ನು ನಿಶ್ಚಲಳಾಗಿ ನಿಂತಿರು

ಉನ್ನತಾದೈಶ್ವರ್ಯ ವೃದ್ಧಿಯಗೈಸು ನಿರ್ಮಲಳೇ |

ಸನ್ನುತಾಂಗಿಯೇ ನಿನ್ನ ಸ್ತುತಿಪೆ ಪ್ರಸನ್ನ ಹೃದಯದಿ ನಿತ್ಯ ನೀ ಪ್ರಹಸನ್ಮುಖದಿ

ಮಾತಾಡು ವರಗಳ ನೀಡಿ ನಲಿದಾಡು, ನೀಡಿ ನಲಿದಾಡು ||೩೪||

www.hindudevotionalblog.com

ಸಿರಿಯೆ ಸಿರಿ ಮಹಾಭೂತಿ ದಾಯಿಕೆ ಪರಮೆ ನಿನ್ನೊಳಗಿರ್ಪ ಸುಮಹತ್ತರನವಾತ್ಮಕ

ನಿಧಿಗಳೂರ್ಧ್ವಕೆ ತಂದು ಕರುಣದಲಿ |

ಕರದಿ ಪಿಡಿದದನೆತ್ತಿ ತೋರಿಸಿ ತ್ವರದಿ ನೀ ಎನಗಿತ್ತು ಪಾಲಿಸು

ಧರಣಿ ರೂಪಳೆ ನಿನ್ನ ಚರಣಕೆ ಶರಣು ನಾ ಮಾಳ್ಪೆ, ಶರಣು ನಾ ಮಾಳ್ಪೆ||೩೫||


ವಸುಧೆ ನಿನ್ನೊಳಗಿರ್ಪ ವಸುವನು ವಶವ ಮಾಳ್ಪುದು ಎನಗೆ ಸರ್ವದಾ

ವಸುಸುದೋಗ್ಧ್ರಿಯು ಎಂಬ ನಾಮವು ನಿನಗೆ ಇರುತಿಹುದು

ಅಸಮ ಮಹಿಮಳೆ ನಿನ್ನ ಶುಭತಮ ಬಸುರಿನೊಳಗಿರುತಿರ್ಪ ನಿಧಿಯನು

ಬೆಸೆಸು ಈಗಲೇ ಹಸಿದು ಬಂದಗೆ ಅಶನವಿತ್ತಂತೇ, ಅಶನವಿತ್ತಂತೇ ||೩೬||


ಹರಿಯ ರಾಣಿಯೆ ರತ್ನಗರ್ಭಳೆ ಸರಿಯು ಯಾರೀ ಸುರರ ಸ್ತೋಮದಿ

ಸರಸಿಜಾಕ್ಷಿಯೆ ನಿನ್ನ ಬಸಿರೊಳಗಿರುವ ನವನಿಧಿಯಾ |

ಮೆರೆವ ಹೇಮದ ಗಿರಿಯ ತೆರದಲಿ ತೆರೆದು ತೋರಿಸಿ ಸಲಿಸು ಎನಗೆ

ಪರಮ ಕರುಣಾಶಾಲಿ ನಮೋ ನಮೋ ಎಂದು ಮೊರೆ ಹೊಕ್ಕೆ, ನಮೋ ನಮೋ ಎಂದು ಮೊರೆಹೊಕ್ಕೆ ||೩೭||


ರಸತಳದ ಸಿರಿ ಲಕುಮಿದೇವಿಯೆ ಶಶಿ ಸಹೋದರಿ ಶೀಘ್ರದಿಂದಲಿ

ಅಸಮ ನಿನ್ನಯ ರೂಪ ತೋರಿಸು ಎನ್ನ ಪುರದಲ್ಲಿ |

ಕುಸುಮಗಂಧಿಯೇ ನಿನ್ನನರಿಯೆನು ವಸುಮತೀ ತಳದಲ್ಲಿ ಬಹುಪರಿ

ಹೊಸತು ಎನಿಪುದು ನಿನ್ನ ಒಲುಮೆಯು ಸಕಲ ಜನತತಿಗೆ, ಸಕಲ ಜನತತಿಗೆ || ೩೮||


ನಾಗವೇಣಿಯೆ ಲಕುಮಿ ನೀ ಮನೋವೇಗದಿಂದಲಿ ಬಂದು ಎನ್ನಯ

ಜಾಗುಮಾಡದೆ ಶಿರದಿ ಹಸ್ತವನಿಟ್ಟು ಮುದದಿಂದ |

ನೀಗಿಸೀ ದಾರಿದ್ರ್ಯ ದುಃಖವ ಸಾಗಿಸೀ ಭವಭಾರ ಪರ್ವತ

ತೂಗಿಸು ನೀ ಎನ್ನ ಸದನದಿ ಕನಕ ಭಾರಗಳಾ, ಕನಕ ಭಾರಗಳಾ ||೩೯||


ಅಂಜಬೇಡವೋ ವತ್ಸಾ ಎನುತಲಿ ಮಂಜುಳೋಕ್ತಿಯ ನುಡಿದು ಕರುಣಾ –

ಪುಂಜ ಮನದಲಿ ಬಂದು ಶೀಘ್ರದಿ ಕಾರ್ಯ ಮಾಡುವುದು |

ಕಂಜಲೋಚನೆ ಕಾಮಧೇನು ಸುರಂಜಿಪಾಮರ ತರುವು ಎನಿಸುವಿ

ಸಂಜಯಪ್ರದಳಾಗಿ ಸಂತತ ಪಾಹೀ ಮಾಂ ಪಾಹೀ, ಪಾಹೀ ಮಾಂ ಪಾಹೀ || ೪೦ ||


ದೇವಿ ಶೀಘ್ರದಿ ಬಂದು ಭೂಮಿದೇವಿ ಸಂಭವೆ ಎನ್ನ ಜನನಿಯೆ

ಕಾಮನಯ್ಯನ ರಾಣಿ ನಿನ್ನಯ ಭೃತ್ಯ ನಾನೆಂದು |

ಭಾವಿಸೀಪರಿ ನಿನ್ನ ಹುಡುಕಿದೆ ಸೇವೆ ನೀ ಕೈಕೊಂಡು ಮನ್ಮನೋ

ಭಾವ ಪೂರ್ತಿಸಿ ಕರುಣಿಸೆನ್ನನು ಶರಣು ಶರಣೆ೦ಬೇ, ಶರಣು ಶರಣೆ೦ಬೇ || ೪೧

||

ಜಾಗರೂಕದಿ ನಿಂತು ಮತ್ತೇ ಜಾಗರೂಕದಿ ಎನಗೆ ನಿತ್ಯದಿ

ತ್ಯಾಗಭೋಗ್ಯಕೆ ಯೋಗ್ಯವೆನಿಪಾಕ್ಷಯ್ಯ ಹೇಮಮಯ |

ಪೂಗ ಕನಕ ಸಂಪೂರ್ಣ ಘಟಗಳ ಯೋಗ ಮಾಳ್ಪುದು ಲೋಕಜನನೀ

ಈಗ ಎನ್ನಯ ಭಾರ ನಿನ್ನದು ಕರೆದು ಕೈ ಪಿಡಿಯೇ, ಅಮ್ಮಾ ಕರೆದು ಕೈ ಪಿಡಿಯೇ || ೪೨ ||


ಧರಣಿಗತ ನಿಕ್ಷೇಪಗಳನುದ್ಧರಿಸಿ ನೀ ಎನ್ನ ಮುಂದೆ ಸೇರಿಸಿ

ಕಿರಿಯ ನಗೆಮೊಗದಿಂದ ನೋಡುತ ನೀಡು ನವನಿಧಿಯ |

ಸ್ಥಿರದಿ ಎನ್ನ ಮಂದಿರದಿ ನಿಂತು ಪರಮ ಮಂಗಳಕಾರ್ಯ ಮಾಡಿಸು

ಸಿರಿಯೆ ನೀನೆ ಒಲಿದು ಪಾಲಿಸು ಮೋಕ್ಷ ಸುಖ ಕೊನೆಗೆ, ಮೋಕ್ಷ ಸುಖ ಕೊನೆಗೆ || ೪೩ ||

www.hindudevotionalblog.com

ನಿಲ್ಲೇ ಲಕುಮೀ ಸ್ಥೈರ್ಯ ಭಾವದಿ ನಿಲ್ಲು ರತ್ನ ಹಿರಣ್ಯ ರೂಪಳೆ

ಎಲ್ಲ ವರಗಳನಿತ್ತು ನನಗೆ ಪ್ರಸನ್ನಮುಖಳಾಗು

ಎಲ್ಲೋ ಇರುತಿಹ ಕನಕ ನಿಧಿಗಳನೆಲ್ಲ ನೀ ತಂದು ನೀಡುವುದೈ

ಪುಲ್ಲಲೋಚನೆ ತೋರಿ ನಿಧಿಗಳ ತಂದು ಪೊರೆಯಮ್ಮ , ತಂದು ಪೊರೆಯಮ್ಮ || ೪೪ ||


ಇಂದ್ರಲೋಕದಲಿದ್ದ ತೆರದಲಿ ನಿಂದ್ರು ಎನ್ನಯ ಗೃಹದಿ ನಿತ್ಯದಿ

ಚಂದ್ರವದನೆಯೆ ಲಕುಮಿ ದೇವಿ ನೀಡೆ ಎನಗಭಯಾ |

ನಿಂದ್ರಲಾರೆನು ಋಣದ ಬಾಧೆಗೆ ತಂದ್ರಮತಿ ನಾನಾದೆ ಭವದೊಳುಪೇಂದ್ರ

ವಲ್ಲಭೆ ಅಭಯ ಪಾಲಿಸು ನಮಿಪೆ ಮಜ್ಜನನೀ, ನಮಿಪೆ ಮಜ್ಜನನೀ || ೪೫ ||


ಬದ್ಧ ಸ್ನೇಹ ವಿರಾಜಮಾನಳೆ ಶುದ್ಧ ಜಾಂಬೂನದದಿ ಸಂಸ್ಥಿತೆ

ಮುದ್ದು ಮೋಹನ ಮೂರ್ತಿ ಕರುಣದಿ ನೋಡೆ ನೀ ಎನ್ನ |

ಬಿದ್ದೆ ನಾ ನಿನ್ನ ಪಾದ ಪದುಮಕೆ ಉದ್ಧರಿಪುದೆಂದು ಬೇಡಿದೇ ಅನಿರುದ್ಧ

ರಾಣಿ ಕೃಪಾಕಟಾಕ್ಷದಿ ನೋಡೆ ಮಾತಾಡೇ, ನೋಡೆ ಮಾತಾಡೇ || ೪೬ ||


ಭೂಮಿ ಗತ ಸಿರಿದೇವಿ ಶೋಭಿತೆ ಹೇಮಮಯೆ ಎಲ್ಲೆಲ್ಲು ಇರುತಿಹೆ

ತಾಮರಸ ಸಂಭೂತೆ ನಿನ್ನಯ ರೂಪ ತೋರೆನಗೆ |

ಭೂಮಿಯಲಿ ಬಹು ರೂಪದಿಂದಲಿ ಪ್ರೇಮಪೂರ್ವಕ ಕ್ರೀಡೆಗೈಯ್ಯುತ

ಹೇಮಮಯ ಪರಿಪೂರ್ಣ ಹಸ್ತವ ಶಿರದ ಮೇಲಿರಿಸು, ಹಸ್ತವ ಶಿರದ ಮೇಲಿರಿಸು || ೪೭ ||


ಫಲಗಳೀವ ಸುಭಾಗ್ಯ ಲಕುಮಿಯೆ ಲಲಿತ ಸರ್ವ ಪುರಾಧಿ ವಾಸಿಯೆ

ಕಲುಷ ಶೂನ್ಯಳೆ ಲಕುಮಿ ದೇವಿಯೆ ಪೂರ್ಣ ಮಾಡೆನ್ನ |

ಕುಲಜೆ ಕುಂಕುಮ ಶೋಭಿಪಾಲಳೆ ಚಲಿತ ಕುಂಡಲ ಕರ್ಣ ಭೂಷಿತೆ

ಜಲಜಲೋಚನೆ ಜಾಗ್ರ ಕಾಲದಿ ಸಲಿಸು ಎನಗಿಷ್ಟ, ಸಲಿಸು ಎನಗಿಷ್ಟ || ೪೮ ||

ತಾಯೆ ಚೆಂದದಲಂದಯೋಧ್ಯದಿ ದಯದಿ ನೀನೆ ನಿಂತು ಪಟ್ಟಣಭಯವ

ಓಡಿಸಿ ಜಾಗು ಮಾಡದೆ ಮತ್ತೆ ಮುದದಿಂದ |

ಜಯವ ನೀಡಿದ ತೆರದಿ ಎನ್ನಾಲಯದಿ ಪ್ರೇಮದಿ ಬಂದು ಕೂಡ್ವದು

ಜಯಪ್ರದಾಯಿನಿ ವಿವಿಧ ವೈಭವದಿಂದ ಒಡಗೂಡಿ, ವೈಭವದಿಂದ ಒಡಗೂಡಿ || ೪೯ ||


ಬಾರೆ ಲಕುಮಿ ಎನ್ನ ಸದನಕೆ ಸಾರಿದೆನು ತವ ಪಾದ ಪದುಮಕೆ

ತೋರಿ ಎನ್ನಯ ಗೃಹದಿ ನೀನೆ ಸ್ಥಿರದಿ ನೆಲೆಸಿದ್ದು |

ಸಾರ ಕರುಣಾರಸವು ತುಂಬಿದ ಚಾರುಜಲರುಹ ನೇತ್ರಯುಗ್ಮಳೆ

ಪಾರುಗಾಣಿಸು ಪರಮ ಕರುಣಿಯೆ ರಿಕ್ತತನದಿಂದ, ರಿಕ್ತತನದಿಂದ || ೫೦ ||


ಸಿರಿಯೆ ನಿನ್ನಯ ಹಸ್ತ ಕಮಲವ ಶಿರದಿ ನೀನೇ ಇರಿಸಿ ಎನ್ನನು

ಕರುಣವೆಂಬಾಮೃತದ ಕಣದಲಿ ಸ್ನಾನಗೈಸಿನ್ನು |

ಸ್ಥಿರದಿ ಸ್ಥಿತಿಯನು ಮಾಡು ಸರ್ವದಾ ಸರ್ವ ರಾಜ ಗೃಹಸ್ಥ ಲಕುಮಿಯೆ

ತ್ವರದಿ ಮೋದದಿ ಯುಕ್ತಳಾಗಿರು ಎನ್ನ ಮುಂದಿನ್ನು, ಎನ್ನ ಮುಂದಿನ್ನು || ೫೧ ||


ನೀನೆ ಆಶೀರ್ವದಿಸಿ ಅಭಯವ ನೀನೆ ಎನಗೆ ಇತ್ತು ಸಾದರ

ನೀನೆ ಎನ್ನ ಶಿರದಲಿ ಹಸ್ತವ ಇರಿಸು ಕರುಣದಲಿ |

ನೀನೆ ರಾಜರ ಗೃಹದ ಲಕ್ಷ್ಮಿಯು ನೀನೆ ಸರ್ವ ಸುಭಾಗ್ಯ ಲಕ್ಷ್ಮಿಯು

ಹೀನವಾಗದೆ ನಿನ್ನ ಕಳೆಗಳ ವೃದ್ಧಿ ಮಾಡಿನ್ನು, ವೃದ್ಧಿ ಮಾಡಿನ್ನು || ೫೨ ||


ಆದಿ ಸಿರಿ ಮಹಾಲಕುಮಿ ವಿಷ್ಣುವಿನಮೋದಮಯ ವಾಮಾಂಕ ನಿನಗನುವಾದ

ಸ್ವಸ್ಥಳವೆಂದು ತಿಳಿದು ನೀನೆ ನೆಲೆಸಿದ್ದೀ |

ಆದಿ ದೇವಿಯೆ ನಿನ್ನ ರೂಪವ ಮೋದದಿಂದಲಿ ತೋರಿ ಎನ್ನೊಳು

ಕ್ರೋಧವಿಲ್ಲದೆ ನಿತ್ಯ ಎನ್ನನು ಪೊರೆಯೆ ಕರುಣದಲಿ, ಪೊರೆಯೆ ಕರುಣದಲಿ || ೫೩ ||


ಒಲಿಯೆ ನೀ ಮಹಾಲಕುಮಿ ಬೇಗನೆ ಒಲಿಯೆ ಮಂಗಳಮೂರ್ತಿ ಸರ್ವದಾ

ನಲಿಯೆ ಚಲಿಸದೆ ಹೃದಯ ಮಂದಿರದಲ್ಲಿ ನೀನಿರುತ |

ಲಲಿತವೇದಗಳೆಲ್ಲಿ ತನಕ ತಿಳಿದು ಹರಿಗುಣ ಪಾಡುತಿರ್ಪುವು

ಜಲಜಲೋಚನ ವಿಷ್ಣು ನಿನ್ನೊಳು ಅಲ್ಲಿ ನೀನಿರ್ಪೆ, ಅಲ್ಲಿ ನೀನಿರ್ಪೆ || ೫೪ ||


ಅಲ್ಲಿ ಪರಿಯಂತರದಿ ನಿನ್ನಯ ಎಲ್ಲ ಕಳೆಗಳು ಎನ್ನ ಮನೆಯಲಿ

ನಿಲ್ಲಿಸೀ ಸುಖ ವ್ರಾತ ನೀಡುತ ಸರ್ವಕಾಲದಲಿ |

ಎಲ್ಲ ಜನಕಾಹ್ಲಾದ ಚಂದಿರ ಕುಲ್ಲದೇ ಶುಭ ಪಕ್ಷ ದಿನದೊಳು

ನಿಲ್ಲದಲೇ ಕಳೆ ವೃದ್ಧಿಯೈದುವ ತೆರದಿ ಮಾಡೆನ್ನ, ತೆರದಿ ಮಾಡೆನ್ನ || ೫೫ ||


ಸಿರಿಯೆ ನೀ ವೈಕುಂಠ ಲೋಕದಿ ಸಿರಿಯೆ ನೀ ಪಾಲ್ಗಡಲ ಮಧ್ಯದಿ

ಇರುವ ತೆರದಲಿ ಎನ್ನ ಮನೆಯೊಳು ವಿಷ್ಣು ಸಹಿತಾಗಿ

ನಿರುತ ಜ್ಞಾನಿಯ ಹೃದಯ ಮಧ್ಯದಿ ಮಿರುಗುವಂದದಲೆನ್ನ ಸದನದಿ

ಹರಿಯ ಸಹಿತದಿ ನಿತ್ಯ ರಾಜಿಸು ನೀಡಿ ಕಾಮಿತವಾ, ನೀಡಿ ಕಾಮಿತವಾ || ೫೬ ||


ಶ್ರೀನಿವಾಸನ ಹೃದಯ ಕಮಲದಿ ನೀನೆ ನಿಂತಿರುವಂತೆ ಸರ್ವದಾ

ಆ ನಾರಾಯಣ ನಿನ್ನ ಹೃದಯದಿ ಇರುವ ತೆರದಂತೆ |

ನೀನು ನಾರಾಯಣನು ಇಬ್ಬರು ಸಾನುರಾಗದಿ ಎನ್ನ ಮನದೊಳು

ನ್ಯೂನವಾಗದೆ ನಿಂತು ಮನೋರಥ ಸಲಿಸಿ ಪೊರೆಯೆಂದೆ, ಮನೋರಥ ಸಲಿಸಿ ಪೊರೆಯೆಂದೆ || ೫೭ ||


ವಿಮಲತರ ವಿಜ್ಞಾನ ವೃದ್ಧಿಯ ಕಮಲೆ ಎನ್ನಯ ಮನದಿ ಮಾಳ್ಪುದು

ಅಮಿತ ಸುಖ ಸೌಭಾಗ್ಯ ವೃದ್ಧಿಯ ಮಾಡು ಮಂದಿರದಿ |

ರಮೆಯೆ ನಿನ್ನಯ ಕರುಣ ವೃದ್ಧಿಯ ಸುಮನದಿಂದಲಿ ಮಾಡು ಎನ್ನಲಿ

ಅಮರಪಾದಪೆ ಸ್ವರ್ಣವೃಷ್ಟಿಯ ಮಾಡು ಮಂದಿರದಿ, ವೃಷ್ಟಿಯ ಮಾಡು ಮಂದಿರದಿ || ೫೮ ||


ಎನ್ನ ತ್ಯಜನವ ಮಾಡದಿರು ಸುರರನ್ನೆ ಆಶ್ರಿತ ಕಲ್ಪಭೂಜಳೆ

ಮುನ್ನ ಭಕ್ತರ ಚಿಂತಾಮಣಿ ಸುರಧೇನು ನೀನಮ್ಮ |

ಘನ್ನ ವಿಶ್ವದ ಮಾತೆ ನೀನೆ ಪ್ರಸನ್ನಳಾಗಿರು ಎನ್ನ ಭವನದಿ

ಸನ್ನುತಾಂಗಿಯೇ ಪುತ್ರ ಮಿತ್ರ ಕಳತ್ರ ಜನ ನೀಡೆ, ಕಳತ್ರ ಜನ ನೀಡೆ || ೫೯ ||


ಆದಿ ಪ್ರಕೃತಿಯೆ ಬೊಮ್ಮನಾಂಡಕೆ ಆದಿ ಸ್ಥಿತಿಲಯ ಬೀಜ ಭೂತಳೆ

ಮೋದ ಚಿನ್ಮಯ ಗಾತ್ರೆ ಪ್ರಾಕೃತ ದೇಹ ವರ್ಜಿತಳೇ |

ವೇದವೇದ್ಯಳೆ ಬೊಮ್ಮನಾಂಡವ ಆದಿಕೂರ್ಮದ ರೂಪದಿಂದಲಿ ಅನಾದಿಕಾಲದಿ

ಪೊತ್ತು ಮೆರೆವದು ಏನು ಚಿತ್ರವಿದು, ಏನು ಚಿತ್ರವಿದು || ೬೦ ||


ವೇದ ಮೊದಲು ಸಮಸ್ತ ಸುರರು ವೇದ ಸ್ತೋಮಗಳಿಂದ ನಿನ್ನ ಅಗಾಧ

ಮಹಿಮೆಯ ಪೊಗಳಲೆಂದರೆ ಶಕ್ತರವರಲ್ಲ

ಓದುಬಾರದ ಮಂದಮತಿ ನಾನಾದ ಕಾರಣ ಶಕ್ತಿಯಿಲ್ಲವು

ಬೋಧದಾಯಕೆ ನೀನೆ ಸ್ತವನವ ಗೈಸು ಎನ್ನಿಂದ, ಗೈಸು ಎನ್ನಿಂದ || ೬೧ ||


ಮಂದ ನಿಂದಲಿ ಸುಗುಣ ವೃಂದವ ಚಂದದಲಿ ನೀ ನುಡಿಸಿ ಎನ್ನಯ

ಮಂದಮತಿಯನು ತರಿದು ನಿರ್ಮಲ ಜ್ಞಾನಿಯೆಂದೆನಿಸು

ಇಂದಿರೇ ತವ ಪಾದಪದುಮದ ದ್ವಂದ್ವ ಸ್ತುತಿಸುವ ಶಕುತಿ ಇದ್ದು

ಕುಂದು ಬಾರದ ಕವಿತೆ ಪೇಳಿಸು ಎಂದು ವಂದಿಪೆನು, ಎಂದು ವಂದಿಪೆನು || ೬೨ ||


ವತ್ಸನ್ವಚನವ ಕೇಳೇ ನೀ ಸಿರಿ ವತ್ಸಲಾಂಛನ ವಕ್ಷಮಂದಿರೆ

ತುಚ್ಛ ಮಾಡದೆ ಮನಕೆ ತಂದು ನೀನೆ ಪಾಲಿಪುದು |

ಸ್ವಚ್ಛವಾಗಿಹ ಸಕಲ ಸಂಪದ ಉತ್ಸಾಹದಿ ನೀ ನೀಡಿ ಮನ್ಮನೋ

ಇಚ್ಛೆ ಪೂರ್ತಿಸು ಜನನಿ ಬೇಡುವೆ ನೀನೆ ಸರ್ವಜ್ಞೆ, ಜನನಿ ನೀನೆ ಸರ್ವಜ್ಞೆ || ೬೩ ||


ನಿನ್ನ ಮೊರೆಯನುಯೈದಿ ಪೂರ್ವದಿ ಧನ್ಯರಾದರು ಧರಣಿಯೊಳಗಾಪನ್ನ

ಪಾಲಕೆ ಎಂದು ನಿನ್ನನು ನಂಬಿ ಮೊರಹೊಕ್ಕೆ |

ನಿನ್ನ ಭಕುತಗನಂತ ಸೌಖ್ಯವು ನಿನ್ನಲೇ ಪರಭಕುತಿ ಅವನಿಗೆ

ನಿನ್ನ ಕರುಣಕೆ ಪಾತ್ರನಾಗುವನೆಂದು ಶ್ರುತಿಸಿದ್ಧ, ಎಂದು ಶ್ರುತಿಸಿದ್ಧ || ೬೪ ||


ನಿನ್ನ ಭಕುತಗೆ ಹಾನಿ ಇಲ್ಲವು ಬನ್ನ ಬಡಿಸುವರಿಲ್ಲ ಎಂದಿಗು

ಮುನ್ನ ಭವಭಯವಿಲ್ಲವೆಂದಾ ಶ್ರುತಿಯು ಪೇಳುವುದು |

ಎನ್ನ ಕರುಣಾಬಲವು ಅವನಲಿ ಘನ್ನವಾಗಿ ಇರುವುದೆಂಬ

ನಿನ್ನ ವಚನವ ಕೇಳಿ ಈ ಕ್ಷಣ ಪ್ರಾಣ ಧರಿಸಿಹೆನು, ಪ್ರಾಣ ಧರಿಸಿಹೆನು || ೬೫ ||


ನಾನು ನಿನ್ನಾಧೀನ ಜನನಿಯೆ ನೀನು ಎನ್ನಲಿ ಕರುಣ ಮಾಳ್ಪುದು

ಹೀನ ಬಡತನ ದೋಷ ಕಳೆದು ನೀನೆ ನೆಲಸಿದ್ದು |

ಮಾನ ಮನೆ ಧನ ಧಾನ್ಯ ಭಕುತಿ ಜ್ಞಾನ ಸುಖ ವೈರಾಗ್ಯ ಮೂರ್ತಿ

ಧ್ಯಾನ ಮಾನಸ ಪೂಜೆ ಮಾಡಿಸು ನೀನೆ ಎನ್ನಿಂದ, ನೀನೆ ಎನ್ನಿಂದ || ೬೬ ||


ನಿನ್ನ ಅಂತಃಕರಣದಿಂದಲಿ ಮುನ್ನ ನಾನೇ ಪೂರ್ಣ ಕಾಮನು

ಇನ್ನು ಆಗುವೆ ಪರಮ ಭಕ್ತ ಕುಚೇಲನಂದದಲಿ |

ಬಿನ್ನೈಪೆ ತವ ಪಾದ ಪದ್ಮಕೆ ಬನ್ನ ನಾ ಬಡಲಾರೆ ದೇವಿ

ಎನ್ನ ನೀ ಕರ ಪಿಡಿದು ಪಾಲಿಸು ರಿಕ್ತತನದಿಂದ, ಪಾಲಿಸು ರಿಕ್ತತನದಿಂದ || ೬೭ ||


ಕ್ಷಣವೂ ಜೀವಿಸಲಾರೆ ನಿನ್ನಯ ಕರುಣವಿಲ್ಲದೆ ಅವನಿ ತಳದಲಿ

ಕ್ಷಣಿಕ ಫಲಗಳ ಬಯಸಲಾರೆನೆ ಮೋಕ್ಷ ಸುಖ ದಾಯೆ |

ಗಣನೆ ಮಾಡದೆ ನೀಚ ದೇವರ ಹಣಿದು ಬಿಡುವೀ ಬಾಧೆ ಕೊಟ್ಟರೆ

ಪಣವ ಮಾಡುವೆ ನಿನ್ನ ಬಳಿಯಲಿ ಮಿಥ್ಯವೇನಿಲ್ಲ, ಮಿಥ್ಯವೇನಿಲ್ಲ || ೬೮ ||


ತನಯನರಿ ವಾತ್ಸಲ್ಯದಿಂದಲಿ ಜನನಿ ಹಾಲಲಿ ತುಂಬಿ ತುಳುಕುವ

ಸ್ತನವನಿತ್ತು ಆದರಿಸಿ ಉಣಿಸುವ ಜನನಿ ತೆರದಂತೆ

ನಿನಗೆ ಸುರರೊಳು ಸಮರ ಕಾಣೆನು ಅನಿಮಿಶೇಷರ ಪಡೆದು ಪಾಲಿಪಿ

ದಿನದಿನದಿ ಸುಖವಿತ್ತು ಪಾಲಿಸು ಕರುಣ ವಾರಿಧಿಯೆ, ಪಾಲಿಸು ಕರುಣ ವಾರಿಧಿಯೆ || ೬೯ ||


ಏಸು ಕಲ್ಪದಿ ನಿನಗೆ ಪುತ್ರನು ಆಸು ಕಲ್ಪದಿ ಮಾತೆ ನೀನೆ

ಲೇಷವಿದಕನುಮಾನವಿಲ್ಲವು ಸಕಲ ಶ್ರುತಿಸಿದ್ಧ |

ಲೇಸು ಕರುಣಾಸಾರವೆನಿಸುವ ಸೂಸುವಾಮೃತಧಾರದಿಂದಲಿ

ಸೋಸಿನಿಂದಭಿಷೇಕಗೈದಭಿಲಾಷೆ ಸಲಿಸಮ್ಮ, ಅಭಿಲಾಷೆ ಸಲಿಸಮ್ಮ || ೭೦ ||


ದೋಷಮಂದಿರನೆನಿಪ ಎನ್ನಲಿ ಲೇಷ ಪುಡಕಲು ಗುಣಗಳಿಲ್ಲ ವಿಶೇಷ

ವೃಷ್ಟಿ ಸುಪಾಂಸು ಕಣಗಳ ಗಣನೆ ಬಹು ಸುಲಭ

ರಾಶಿಯಂದದಲಿಪ್ಪ ಎನ್ನಘ ಸಾಸಿರಾಕ್ಷಗಶಕ್ಯ ಗಣಿಸಲು

ಏಸು ಪೇಳಲಿ ತಾಯೇ ತನಯನ ತಪ್ಪು ಸಹಿಸಮ್ಮ, ಅಮ್ಮಾ ತಪ್ಪು ಸಹಿಸಮ್ಮ || ೭೧ ||


ಪಾಪಿಜನರೊಳಗಗ್ರಗಣ್ಯನು ಕೋಪ ಪೂರಿತ ಚಿತ್ತ ಮಂದಿರ

ಈ ಪಯೋಜಭವಾಂಡ ಪುಡುಕಿದರಾರು ಸರಿಯಿಲ್ಲ

ಶ್ರೀಪನರಸಿಯೆ ಕೇಳು ದೋಷವು ಲೋಪವಾಗುವ ತೆರದಿ ಮಾಡಿ

ರಾಪುಮಾಡದೆ ಸಲಹು ಶ್ರೀಹರಿ ರಾಣಿ ಕಲ್ಯಾಣಿ, ಹರಿ ರಾಣಿ ಕಲ್ಯಾಣಿ || ೭೨ ||


ಕರುಣಶಾಲಿಯರೊಳಗೆ ನೀ ಬಲು ಕರುಣಶಾಲಿಯು ಎಂದು ನಿನ್ನಯ

ಚರಣಯುಗಕಭಿನಮಿಸಿ ಸಾರ್ದೆನು ಪೊರೆಯೆ ಪೊರೆಯೆಂದು |

ಹರಣ ನಿಲ್ಲದು ಹಣವು ಇಲ್ಲದೆ ಶರಣರನುದಿನ ಪೊರೆವ ದೇವಿ ಸುಪರಣ

ವಾಹನ ರಾಣಿ ಎನ್ನನು ಕಾಯೆ ವರವೀಯೇ, ಕಾಯೆ ವರವೀಯೇ || ೭೩ ||


ಉದರ ಕರ ಶಿರ ಟೊಂಕ ಸೂಲಿಯ ಮೊದಲೇ ಸೃಷ್ಟಿಯಗೈಯ್ಯದಿರಲೌಷಧದ

ಸೃಷ್ಟಿಯು ವ್ಯರ್ಥವಾಗುವ ತೆರದಿ ಜಗದೊಳಗೇ |

ವಿಧಿಯು ಎನ್ನನು ಸೃಜಿಸದಿದ್ದರೆ ಪದುಮೆ ನಿನ್ನ ದಯಾಳುತನವು

ಪುದುಗಿ ಪೋದಿತು ಎಂದು ತಿಳಿದಾ ಬೊಮ್ಮ ಸೃಜಿಸಿದನು, ಬೊಮ್ಮ ಸೃಜಿಸಿದನು || ೭೪ ||

www.hindudevotionalblog.com

ನಿನ್ನ ಕರುಣವು ಮೊದಲು ದೇವಿಯೆ ಎನ್ನ ಜನನವು ಮೊದಲು ಪೇಳ್ವದು

ಮುನ್ನ ಇದನನು ವಿಚಾರಗೈದು ವಿತ್ತ ಎನಗೀಯೇ |

ಘನ್ನ ಕರುಣಾನಿಧಿಯು ಎನುತಲಿ ಬಿನ್ನಹವ ನಾ ಮಾಡಿ ಯಾಚಿಪೆ

ಇನ್ನು ನಿಧಿಯನು ಇತ್ತು ಪಾಲಿಸು ದೂರ ನೋಡದಲೇ, ದೂರ ನೋಡದಲೇ || ೭೫ ||


ತಂದೆ ತಾಯಿಯು ನೀನೆ ಲಕುಮಿ ಬಂಧು ಬಳಗವು ನೀನೆ ದೇವಿ

ಹಿಂದೆ ಮುಂದೆ ಎನಗೆ ನೀನೆ ಗುರುವು ಸದ್ಗತಿಯು |

ಇಂದಿರೆಯೆ ಎನ್ನ ಜೀವ ಕಾರಿಣಿಸಂದೇಹ ಎನಗಿಲ್ಲ ಪರಮಾನಂದ

ಸಮುದಯ ನೀಡೆ ಕರುಣವ ಮಾಡೆ ವರ ನೀಡೆ, ಕರುಣವ ಮಾಡೆ ವರ ನೀಡೆ || ೭೬ ||


ನಾಥಳೆನಿಸುವಿ ಸಕಲ ಲೋಕಕೆ ಖ್ಯಾತಳೆಣಿಸುವೆ ಸರ್ವ ಕಾಲದಿ

ಪ್ರೀತಳಾಗಿರು ಎನಗೆ ಸಕಲವು ನೀನೆ ನಿಜವೆಂದೆ |

ಮಾತೆ ನೀನೆ ಎನಗೆ ಹರಿ ನಿಜ ತಾತ ಈರ್ವರು ನೀವೆ ಇರಲಿ

ರೀತಿಯಿಂದಲಿ ಭವದಿ ತೊಳಲಿಪುದೇನು ನಿಮ್ಮ ನ್ಯಾಯ, ಇದೇನು ನಿಮ್ಮ ನ್ಯಾಯ || ೭೭ ||


ಆದಿ ಲಕುಮಿ ಪ್ರಸನ್ನಳಾಗಿರು ಮೋದಜ್ಞಾನ ಸುಭಾಗ್ಯ ಧಾತ್ರಿಯೆ

ಛೇದಿಸಜ್ಞಾನಾದಿ ದೋಷವ ತ್ರಿಗುಣವರ್ಜಿತಳೇ |

ಸಾದರದಿ ನೀ ಕರೆದು ಕೈ ಪಿಡಿ ಮಾಧವನ ನಿಜ ರಾಣಿ ನಮಿಸುವೆ

ಬಾಧೆ ಗೊಳಿಸುವ ಋಣವ ಕಳೆದು ಸಿರಿಯೆ ಪೊರೆಯೆಂದೆ, ಅಮ್ಮಾ ಸಿರಿಯೆ ಪೊರೆಯೆಂದೆ || ೭೮ ||


ವಚನಜಾಡ್ಯವ ಕಳೆವ ದೇವಿಯೆ ಎಚೆಯೆ ನೂತನ ಸ್ಪಷ್ಟ ವಾಕ್ಪದ

ನಿಚಯ ಪಾಲಿಸಿ ಎನ್ನ ಜಿಹ್ವಾಗ್ರದಲಿ ನೀ ನಿಂತು |

ರಚನೆ ಮಾಡಿಸು ಎನ್ನ ಕವಿತೆಯ ಪ್ರಚುರವಾಗುವ ತೆರದಿ ಮಾಳ್ಪುದು

ಉಚಿತವೇ ಸರಿಯೇನು ಪೇಳ್ವದು ತಿಳಿಯೆ ಸರ್ವಜ್ಞೆ, ಲಕ್ಷ್ಮೀ ತಿಳಿಯೆ ಸರ್ವಜ್ಞೆ || ೭೯ ||


ಸರ್ವ ಸಂಪದದಿಂದ ರಾಜಿಪೆ ಸರ್ವ ತೇಜೋರಾಶಿಗಾಶ್ರಯೇ

ಸರ್ವರುತ್ತಮ ಹರಿಯ ರಾಣಿಯೆ ಸರ್ವರುತ್ತಮಳೇ |

ಸರ್ವ ಸ್ಥಳದಲಿ ದೀಪ್ಯಮಾನಳೆ ಸರ್ವ ವಾಕ್ಯಕೆ ಮುಖ್ಯ ಮಾನಿಯೆ

ಸರ್ವ ಕಾಲದಲೆನ್ನ ಜಿಹ್ವದಿ ನೀನೆ ನಟಿಸುವುದು, ಅಮ್ಮಾ ನೀನೆ ನಟಿಸುವುದು || ೮೦ ||


ಸರ್ವ ವಸ್ತ್ವಪರೋಕ್ಷ ಮೊದಲೂ ಸರ್ವ ಮಹಾಪುರುಷಾರ್ಥ ದಾತಳೆ

ಸರ್ವಕಾಂತಿಗಳೊಳಗೆ ಶುಭ ಲಾವಣ್ಯದಾಯಕಳೇ |

ಸರ್ವ ಕಾಲದಿ ಸರ್ವ ಧಾತ್ರಿಯೆ ಸರ್ವ ರೀತಿಲಿ ಸುಮುಖಿಯಾಗಿ

ಸರ್ವ ಹೇಮ ಸುಪೂರ್ಣೆ ಎನ್ನಯ ನಯನದೊಳಗೆಸೆಯೆ, ಎನ್ನಯ ನಯನದೊಳಗೆಸೆಯೆ || ೮೧ ||


ಸಕಲ ಮಹಾಪುರುಷಾರ್ಥದಾಯಿನಿ ಸಕಲ ಜಗವನು ಪೆತ್ತ ಜನನಿಯೆ

ಸಕಲರೀಶ್ವರೀ ಸಕಲ ಭಯಗಳ ನಿತ್ಯ ಸಂಹಾರೀ |

ಸಕಲ ಶ್ರೇಷ್ಠಳೆ ಸುಮುಖಿಯಾಗಿ ಸಕಲ ಭಾವವ ಧರಿಸಿ ಸರ್ವದಾ

ಸಕಲ ಹೇಮ ಸುಪೂರ್ಣೆ ಎನ್ನಯ ನಯನದೊಳಗೆಸೆಯೆ, ಅಮ್ಮಾ ನಯನದೊಳಗೆಸೆಯೆ || ೮೨ ||


ಸಕಲ ವಿಧ ವಿಘ್ನಾಪಹಾರಿಣಿಸಕಲ ಭಕ್ತೋದ್ಧಾರಕಾರಿಣಿ

ಸಕಲ ಸುಖ ಸೌಭಾಗ್ಯದಾಯಿನಿ ನೇತ್ರದೊಳಗೆಸೆಯೇ |

ಸಕಲ ಕಲೆಗಳ ಸಹಿತ ನಿನ್ನಯ ಭಕುತನಾದವನೆಂದು ಸರ್ವದಾ

ವ್ಯಕುತಳಾಗಿರು ಎನ್ನ ಹೃದಯದ ಕಮಲ ಮಧ್ಯದಲಿ, ಹೃದಯದ ಕಮಲ ಮಧ್ಯದಲಿ || ೮೩ ||


ನಿನ್ನ ಕರುಣಾ ಪಾತ್ರನಾಗಿಹ ಎನ್ನ ಗೋಸುಗ ನೀನೆ ತ್ವರದಿ ಪ್ರಸನ್ನಳಾಗ್ಯಧಿದೇವಗಣನುತೆ

ಸುಗುಣೆ ಪರಿಪೂರ್ಣೆ |

ಎನ್ನ ಪೆತ್ತಿಹ ತಾಯೇ ಸರ್ವದಾ ಸನ್ನಿಹಿತಳಾಗೆನ್ನ ಮನೆಯೊಳು

ನಿನ್ನ ಪತಿ ಸಹವಾಗಿ ಸರ್ವದಾ ನಿಲಿಸು ಶುಭದಾಯೇ, ನಿಲಿಸು ಶುಭದಾಯೇ || ೮೪ ||


ಎನ್ನ ಮುಖದಲಿ ನೀನೆ ನಿಂತು ಘನ್ನನಿವನೆಂದೆನಿಸಿ ಲೋಕದಿ

ಧನ್ಯ ಧನ್ಯನ ಮಾಡು, ವರಗಳ ನೀಡು ನಲಿದಾಡು |

ಅನ್ಯ ನಾ ನಿನಗಲ್ಲ ದೇವೀ ಜನ್ಯನಾದವನೆಂದು ತಿಳಿದು

ಅನ್ನ ವಸನವ ಧಾನ್ಯ ಧನವನು ನೀನೆ ಎನಗೀಯೇ, ಲಕ್ಷ್ಮೀ ನೀನೇ ಎನಗೀಯೇ || ೮೫ ||


ವತ್ಸ ಕೇಳೆಲೊ ಅಂಜಬೇಡವೋ ಸ್ವಚ್ಛ ಎನ್ನಯ ಕರವ ಶಿರದಲಿ

ಇಚ್ಛೆ ಪೂರ್ವಕ ನೀಡ್ದೆ ನಡಿ ಸರವತ್ರ ನಿರ್ಭಯದಿ |

ಉತ್ಸಹಾತ್ಮ ಮನೋನುಕಂಪಿಯೆ ಪ್ರೋತ್ಸಹದಿ ಕಾರುಣ್ಯ ದೃಷ್ಟಿಲಿ

ತುಚ್ಛ ಮಾಡದೆ ವೀಕ್ಷಿಸೀಗಲೆ ಲಕ್ಷ್ಮೀ ಒಲಿ ಎನಗೆ, ಲಕ್ಷ್ಮೀ ಒಲಿ ಎನಗೆ || ೮೬ ||


ಮುದದಿ ಕರುಣ ಕಟಾಕ್ಷ ಜನರಿಗೆ ಉದಯವಾಗಲು ಸಕಲ ಸಂಪದ

ಒದಗಿ ಬರುವುದು ಮಿಥ್ಯವಲ್ಲವು ಬುಧರ ಸಮ್ಮತವು |

ಅದಕೆ ನಿನ್ನಯ ಪದವ ನಂಬಿದೆ ಮುದದಿ ಎನ್ನಯ ಸದನದಲಿ ನೀನೊದಗಿ

ಭಾಗ್ಯದ ನಿಧಿಯ ಪಾಲಿಸು ಪದುಮೆ ನಮಿಸುವೆನು, ಪಾಲಿಸು ಪದುಮೆ ನಮಿಸುವೆನು || ೮೭ ||


ರಾಮೆ ನಿನ್ನಯ ದೃಷ್ಟಿಲೋಕಕೆ ಕಾಮಧೇನೆಂದೆನಿಸಿಕೊಂಬದು

ರಾಮೆ ನಿನ್ನಯ ಮನಸು ಚಿಂತಾರತ್ನ ಭಜಿಪರಿಗೆ |

ರಾಮೆ ನಿನ್ನಯ ಕರದ ದ್ವಂದ್ವವು ಕಾಮಿತಾರ್ಥವ ಕೇಳ್ವ ಜನರಿಗೆ

ಕಾಮಪೂರ್ತಿಪ ಕಲ್ಪವೃಕ್ಷವು ತಾನೆ ಎನಿಸಿಹುದು, ವೃಕ್ಷವು ತಾನೆ ಎನಿಸಿಹುದು || ೮೮ ||


ನವವೆನಿಪನಿಧಿ ನೀನೆ ಇಂದಿರೆ ತವ ದಯಾಭಿಧ ರಸವೇ ಎನಗೇ

ಧ್ರುವದಿ ದೇವಿ ರಸಾಯನವೆ ಸರಿ ಸರ್ವಕಾಲದಲಿ |

ಭುವನ ಸಂಭವೆ ನಿನ್ನ ಮುಖವು ದಿವಿಯೊಳೊಪ್ಪುವ ಚಂದ್ರನಂದದಿ

ವಿವಿಧಕಳೆಗಳ ಪೂರ್ಣವಾದ್ಯಖಿಳಾರ್ಥ ಕೊಡುತಿಹುದು, ಅಖಿಳಾರ್ಥ ಕೊಡುತಿಹುದು || ೮೯ ||

www.hindudevotionalblog.com

ರಸದ ಸ್ಪರ್ಶದಲಿಂದ ಲೋಹವು ಮಿಸುಣಿ ಭಾವವ ಐದೋ ತೆರದಲಿ

ಅಸಮ ಮಹಿಮಳೆ ನಿನ್ನ ಕರುಣ ಕಟಾಕ್ಷ ನೋಟದಲಿ |

ವಸುಧೆ ತಳದೊಳಗಿರ್ಪ ಜೀವರ ಅಶುಭ ಕೋಟಿಗಳೆಲ್ಲ ಪೋಗೀ

ಕುಸುಮ ಗಂಧಿಯೆ ಮಂಗಳೋತ್ಸವ ಸತತವಾಗುವುದು, ಉತ್ಸವ ಸತತವಾಗುವುದು || ೯೦ ||


ನೀಡು ಎಂದರೆ ಇಲ್ಲವೆಂಬುವ ರೂಢಿ ಜೀವರ ಮಾತಿಗಂಜುತ

ಬೇಡಿಕೊಂಬುದಕೀಗ ನಿನ್ನನು ಶರಣು ಹೊಂದಿದೆನು |

ನೋಡಿ ಕರುಣ ಕಟಾಕ್ಷದಿಂದಯ ಮಾಡಿ ಮನದಭಿಲಾಷೆ ಪೂರ್ತಿಸಿ

ನೀಡು ಎನಗಖಿಳಾರ್ಥ ಭಾಗ್ಯವ ಹರಿಯ ಸಹಿತದಲಿ, ಭಾಗ್ಯವ ಹರಿಯ ಸಹಿತದಲಿ || ೯೧ ||


ಕಾಮಧೇನು ಸುಕಲ್ಪತರು ಚಿಂತಾಮಣಿ ಸಹವಾಗಿ ನಿನ್ನಯ

ಕಾಮಿತಾರ್ಥಗಳೀವ ಕಳೆಗಳಳುಣಿಸಿ ಇರುತಿಹವು |

ರಾಮೇ ನಿನ್ನಯ ರಸರಸಾಯನ ಸ್ತೋಮದಿಂ ಶಿರ ಪಾದ ಪಾಣಿ

ಪ್ರೇಮಪೂರ್ವಕ ಸ್ಪರ್ಶವಾಗಲು ಹೇಮವಾಗುವುದು, ಹೇಮವಾಗುವುದು || ೯೨ ||


ಆದಿ ವಿಷ್ಣುನ ಧರ್ಮಪತ್ನಿಯೆ ಸಾದರದಿ ಹರಿ ಸಹಿತ ಎನ್ನಲಿ

ಮೋದದಿಂದಲಿ ಸನ್ನಿಧಾನವ ಮಾಡೆ ಕರುಣದಲಿ |

ಆದಿ ಲಕ್ಷ್ಮಿಯೆ ಪರಮಾನುಗ್ರಹವಾದ ಮಾತ್ರದಿ ಎನಗೆ ಪದು ಪದೆ

ಆದಪುದು ಸರ್ವತ್ರ ಸರ್ವದಾ ನಿಧಿಯ ದರ್ಶನವು, ನಿಧಿಯ ದರ್ಶನವು || ೯೩ ||


ಆವ ಲಕ್ಷ್ಮೀ ಹೃದಯ ಮಂತ್ರವ ಸಾವಧಾನದಿ ಪಠಣೆಗೈವನು

ಆವ ಕಾಲದಿ ರಾಜ್ಯಲಕ್ಷ್ಮೀಯನೈದು ಸುಖಿಸುವನು |

ಆವ ಮಹಾದಾರಿದ್ರ್ಯ ದೋಷಿಯು ಸೇವಿಸೆ ಮಹಾ ಧನಿಕನಾಗುವ

ದೇವಿ ಅವನಾಲಯದಿ ಸರ್ವದಾ ಸ್ಥಿರದಿ ನಿಲಿಸುವಳು || ೯೪ ||


ಲಕುಮಿ ಹೃದಯದ ಪಠಣೆ ಮಾತ್ರದಿ ಲಕುಮಿ ತಾ ಸಂತುಷ್ಟಳಾಗಿ

ಸಕಲ ದುರಿತಗಳಳಿದು ಸುಖ ಸೌಭಾಗ್ಯ ಕೊಡುತಿಹಳು |

ವಿಕಸಿತಾನನೆ ವಿಷ್ಣುವಲ್ಲಭೆ ಭಕುತ ಜನರನು ಸರ್ವ ಕಾಲದಿ

ವ್ಯಕುತಳಾದ್ಯವರನ್ನ ಪೊರೆವಳು ತನಯರಂದದಲಿ, ಲಕ್ಷ್ಮೀ ತನಯರಂದದಲಿ || ೯೫ ||


ದೇವಿ ಹೃದಯವು ಪರಮ ಗೋಪ್ಯವು ಸೇವಕನಿಗಖಿಳಾರ್ಥ ಕೊಡುವುದು

ಭಾವ ಪೂರ್ವಕ ಪಂಚಸಾವಿರ ಜಪಿಸೆ ಪುನಶ್ಚರಣ |

ಈ ವಿಧಾನದಿ ಪಠಣೆ ಮಾಡಲು ತಾ ಒಲಿದು ಸೌಭಾಗ್ಯ ನಿಧಿಯನು

ತೀವ್ರದಿಂದಲಿ ಕೊಟ್ಟು ಸೇವಕರಲ್ಲಿ ನಿಲಿಸುವಳು, ಸೇವಕರಲ್ಲಿ ನಿಲಿಸುವಳು || ೯೬ ||


ಮೂರು ಕಾಲದಿ ಜಪಿಸಲುತ್ತಮ ಸಾರ ಭಕುತಿಲಿ ಒಂದು ಕಾಲದಿ

ಧೀರಮಾನವ ಪಠಿಸಲವನಖಿಳಾರ್ಥ ಐದುವನು |

ಆರು ಪಠಣವಗೈಯ್ಯಲಿದನನುಭೂರಿ ಶ್ರವಣವ ಗೈದ ಮಾನವ

ಬಾರಿ ಬಾರಿಗೆ ಧನವ ಗಳಿಸುವ ಸಿರಿಯ ಕರುಣದಲಿ, ಸಿರಿಯ ಕರುಣದಲಿ || ೯೭ ||


ಶ್ರೀ ಮಹತ್ತರ ಲಕ್ಷ್ಮಿಗೋಸುಗ ಈ ಮಹತ್ತರ ಹೃದಯ ಮಂತ್ರವ

ಪ್ರೇಮಪೂರ್ವಕ ಭಾರ್ಗವಾರದ ರಾತ್ರಿ ಸಮಯದಲಿ |

ನೇಮದಿಂದಲಿ ಪಂಚವಾರವ ಕಾಮಿಸೀಪರಿ ಪಠಣೆ ಮಾಡಲು

ಕಾಮಿತಾರ್ಥವನೈದಿ ಲೋಕದಿ ಬಾಳ್ವ ಮುದದಿಂದ, ಬಾಳ್ವ ಮುದದಿಂದ || ೯೮ ||


ಸಿರಿಯ ಹೃದಯ ಸುಮಂತ್ರದಿಂದಲಿ ಸ್ಮರಿಸಿ ಅನ್ನವ ಮಂತ್ರಿಸಿಡಲು

ಸಿರಿಯ ಪತಿ ತಾನವರ ಮಂದಿರದೊಳಗೆ ಅವತರಿಪ |

ನರನೆ ಆಗಲಿ ನಾರಿ ಆಗಲಿ ಸಿರಿಯ ಹೃದಯ ಸುಮಂತ್ರದಿಂದಲಿ

ನಿರುತ ಮಂತ್ರಿತ ಜಲವ ಕುಡಿಯಲು ಧನಿಕ ಪುಟ್ಟುವನು, ಧನಿಕ ಪುಟ್ಟುವನು || ೯೯ ||


ಆವನಾಶ್ವೀಜ ಶುಕ್ಲ ಪಕ್ಷದಿ ದೇವಿ ಉತ್ಸವ ಕಾಲದೊಳು ತಾ

ಭಾವ ಶುದ್ಧಿಲಿ ಹೃದಯ ಜಪ ಒಂದಧಿಕ ದಿನದಿನದಿ |

ಈ ವಿಧಾನದಿ ಜಪವ ಮಾಡಲು ಶ್ರೀವನದಿ ಸಂಪದವನೈದುವ

ಶ್ರೀವನಿತೆ ತಾ ಕನಕವೃಷ್ಟಿಯ ಕರೆವಳನವರತ, ಕರೆವಳನವರತ || ೧೦೦ ||


ಆವ ಭಕುತನು ವರುಷ ದಿನ ದಿನ ಭಾವ ಶುದ್ಧಿಲಿ ಎಲ್ಲ ಪೊತ್ತು

ಸಾವಧಾನದಿ ಹೃದಯ ಮಂತ್ರವ ಪಠಿಸಲವನಾಗ |

ದೇವಿ ಕರುಣಕಟಾಕ್ಷದಿಂದಲಿ ದೇವ ಇಂದ್ರನಿಗಧಿಕನಾಗುವ

ಈ ವಸುಂಧರೆಯೊಳಗೆ ಭಾಗ್ಯದ ನಿಧಿಯು ತಾನೆನಿಪ, ಭಾಗ್ಯದ ನಿಧಿಯು ತಾನೆನಿಪ || ೧೦೧ ||


ಶ್ರೀಶ ಪದದಲಿ ಭಕುತಿ ಹರಿಪದ ದಾಸ ಜನಪದ ದಾಸ ಭಾವವ

ಈಸು ಮಂತ್ರಗಳರ್ಥ ಸಿದ್ಧಿಯು ಗುರುಪದ ಸ್ಮೃತಿಯು |

ಲೇಸು ಜ್ಞಾನ ಸುಬುದ್ಧಿ ಪಾಲಿಸು ವಾಸವಾಗಿರು ಎನ್ನ ಮನೆಯಲಿ

ಈಶ ಸಹ ಎನ ತಾಯೆ ಉತ್ತಮ ಪದವು ನೀ ಸಿರಿಯೇ, ಉತ್ತಮ ಪದವು ನೀ ಸಿರಿಯೇ || ೧೦೨ ||


ಧರಣಿ ಪಾಲಕನೆನಿಸು ಎನ್ನನು ಪುರುಷರುತ್ತಮನೆನಿಸು ಸರ್ವದಾ

ಪರಮವೈಭವ ನಾನಾವಿಧವಾಗರ್ಥ ಸಿದ್ಧಿಗಳಾ |

ಹಿರಿದು ಕೀರ್ತಿಯ ಬಹಳ ಭೋಗವ ಪರಮ ಭಕ್ತಿ ಜ್ಞಾನ ಸುಮತಿಯ

ಪರಿಮಿತಿಲ್ಲದೆ ಇತ್ತು ಪುನರಪಿ ಸಲಹು ಶ್ರೀದೇವೀ, ಸಲಹು ಶ್ರೀದೇವೀ || ೧೦೩ ||


ವಾದಮಾಡುದಕರ್ಥ ಸಿದ್ಧಿಯು ಮೋದತೀರ್ಥರ ಮತದಿ ದೀಕ್ಷವು

ಸಾದರದಿ ನೀನಿತ್ತು ಪಾಲಿಸು ವೇದದಭಿಮಾನೀ |

ಮೋದದಲಿ ಪುತ್ರಾರ್ಥ ಸಿದ್ಧಿಯು ಓದದಲೆ ಸಿರಿ ಬ್ರಹ್ಮವಿದ್ಯವು

ಆದಿ ಭಾರ್ಗವಿ ಇತ್ತು ಪಾಲಿಸು ಜನ್ಮ ಜನ್ಮದಲೀ, ಜನ್ಮ ಜನ್ಮದಲೀ || ೧೦೪ ||


ಸ್ವರ್ಣ ವೃಷ್ಟಿಯ ಎನ್ನ ಮನೆಯಲಿ ಕರಿಯ ಧಾನ್ಯ ಸುವೃದ್ಧಿ ದಿನ ದಿನ

ಭರದಿ ನೀ ಕಲ್ಯಾಣ ವೃದ್ಧಿಯ ಮಾಡೆ ಸಂಭ್ರಮದೀ |

ಸಿರಿಯೆ ಅತುಳ ವಿಭೂತಿ ವೃದ್ಧಿಯ ಹರುಷದಿಂದಲಿಗೈದು ಧರೆಯೊಳು

ಮೆರೆಯೆ ಸಂತತ ಉಪಮೆವಿಲ್ಲದೆ ಹರಿಯ ನಿಜ ರಾಣಿ, ಹರಿಯ ನಿಜ ರಾಣಿ || ೧೦೫ ||


ಮಂದಹಾಸ ಮುಖಾರವಿಂದಳೆ ಇಂದುಸೂರ್ಯರ ಕೋಟಿಭಾಸಳೆ

ಸುಂದರಾಂಗಿಯೆ ಪೀತವಸನಳೆ ಹೇಮಭೂಷಣಳೆ |

ಕುಂದು ಇಲ್ಲದ ಬೀಜ ಪೂರಿತ ಚಂದವಾದ ಸುಹೇಮಕಲಶಗಳಿಂದ

ನೀನೊಡಗೂಡಿ ತೀವ್ರದಿ ಬರುವುದೆನ್ನ ಮನೆಗೆ, ಬರುವುದೆನ್ನ ಮನೆಗೆ || ೧೦೬ ||


ನಮಿಪೆ ಶ್ರೀ ಹರಿ ರಾಣಿ ನಿನ್ನ ಪದ ಕಮಲಯುಗಕನವರತ ಭಕುತಿಲಿ

ಕಮಲೆ ನಿನ್ನಯ ವಿಮಲ ಕರಯುಗ ಎನ್ನ ಮಸ್ತಕದೀ |

ಮಮತೆಯಿಂದಲಿ ಇಟ್ಟು ನಿಶ್ಚಲ ಅಮಿತ ಭಾಗ್ಯವ ನೀಡೆ ತ್ವರದಿ

ಕಮಲಜಾತಳೆ ರಮೆಯೆ ನಮೋ ನಮೋ ಮಾಳ್ಪೆನನವರತ, ನಮೋ ನಮೋ ಮಾಳ್ಪೆನನವರತ || ೧೦೭

||


ಮಾತೆ ನಿನ್ನಯ ಜಠರಕಮಲ ಸುಜಾತನಾಗಿಹ ಸುತನ ತೆರದಿ

ಪ್ರೀತಿ ಪೂರ್ವಕ ಭಾಗ್ಯ ನಿಧಿಗಳನಿತ್ತು ನಿತ್ಯದಲಿ |

ನೀತ ಭಕುತೀ ಜ್ಞಾನ ಪೂರ್ವಕ ದಾತ ಗುರು ಜಗನ್ನಾಥ ವಿಟ್ಠಲನ

ಪ್ರೀತಿಗೊಳಿಸುವ ಭಾಗ್ಯ ಪಾಲಿಸಿ ಪೊರೆಯೇ ನೀ ಎನ್ನ, ಲಕ್ಷ್ಮೀ ಪೊರೆಯೇ, ಅಮ್ಮಾ ಪೊರೆಯೇ || ೧೦೮ ||


ಶ್ರೀ ಲಕ್ಷ್ಮೀ ಹೃದಯ Sri Lakshmi Hrudaya Stotra Kannada Lyrics
--

Related Hindu Mantras in Kannada Language

ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಂ ಕನ್ನಡ

ಶ್ರೀ ದುರ್ಗಾ ಅಷ್ಟೋತ್ತರ ಶತ ನಾಮಾವಳಿ

ಆಂಜನೇಯ ದಂಡಕಂ

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಮ್ ಕನ್ನಡ

--


Comments

Search Hindu Devotional Topics

Contact Hindu Devotional Blog

Name

Email *

Message *